Wednesday 29 March 2017

ಯುಗಾದಿ ಒಂದು ಸಂಕ್ಷಿಪ ನೆನಪು

ಕಲಿಕೆ
******
ಹಬ್ಬ ಯುಗಾದಿಯೇ ಆದರೂ ಇಂದು ಬೆಳಗ್ಗೆ(೨೯/೩/೨೦೧೭) ಬೇಗನೆದ್ದು ವಾಕಿಂಗ್ ಮಾಡುವಾಗ ಮೊದಲಿಗೆ ಅಂಬಿಕಾ ಮೇಡಮ್  ಅವರ ಭೇಟಿ, ಮನೆಗೆ ಬಂದು 'ತೋರಣ  ಕಟ್ಟಿಸಿ', ಸ್ನಾನ -ಪೂಜೆ, ಅಡುಗೆ ನೈವೇದ್ಯ , ಎಲ್ಲ ಮುಗಿಸಿ ಹೆಗಲಿಗೆ ಚೀಲ ಏರಿಸಿ ನನಗೆ ಅತ್ಯಂತ ಪ್ರಿಯವಾದ ವಿಷಯ  "ವಿಜ್ಞಾನ ಚಲನಚಿತ್ರ ನಿರ್ಮಾಣ " ಕಲಿಯಲು 'ನಿಯಾಸ್ 'ಗೆ   ಹೊರಟುನಿಂತಾಗ ಮಿಶ್ರ ಅನುಭವ . ಕಲಿಕೆ ಎಂಬ ದಾಹಕ್ಕೆ ಮನಸ್ಸನ್ನು 'ಸಂಯಮ'ಗೊಳಿಸುವ  ಜಗತ್ತನ್ನು ಗೆಲ್ಲುಬಲ್ಲೆನೆಂಬ ಮನೋಶಕ್ತಿಯನ್ನು ನೀಡಬಲ್ಲ ಸಾದ್ಯತೆಯಿರುವುದು ಗೋಚರಿಸಿತು. 
ವಿಜ್ಞಾನ ಚಲನಚಿತ್ರಗಳು ವಿಜ್ಞಾನ ಸಂವಹನೆಯ ಒಂದು ಸಾಧ್ಯತೆ -ಮಜಲು -ಮತ್ತು ಶಕ್ತಿ, ಈ ಕಲೆಯನ್ನು ಅತ್ಯುತ್ತಮ ಸಂಪನ್ಮೂಲ ವ್ಯಕ್ತಿಗಳು ಮನೆಬಾಗಿಲಿನಲ್ಲಿ ಹೇಳಿಕೊಡುತ್ತಿರುವುದು(ಬೆಂಗಳೂರು )  ನಮ್ಮಂತಹವರಿಗೆ ಸಿಕ್ಕ ಉತ್ತಮ ಅವಕಾಶವೇ ಸೈ. 
ನೆನಪು 
*********
ನೆನಪಿನ ವಿಚಾರಕ್ಕೆ ಬಂದಾಗ ತಕ್ಕ ಮಟ್ಟಿಗೆ ಅತ್ಯುತ್ತಮ ನೆನಪುಗಳು ಬದುಕಿನಲ್ಲಿವೆ, ಅದಕ್ಕೆ ಕಾರಣ, ಅತ್ಯುತ್ತಮ ರೀತಿಯಲ್ಲಿ ಸಾಮರಸ್ಯದ ದಾಂಪತ್ಯ ನಿರ್ವಹಿಸಿದ ನನ್ನ ತಂದೆ-ತಾಯಿ ಯವರು . 
ಯುಗಾದಿಹಬ್ಬಕ್ಕೆ ಒಂದು ತಿಂಗಳ ಮುಂಚೆಯೇ ಬಟ್ಟೆ ತರುತ್ತಿದ್ದ ಅಪ್ಪ , ಪ್ರತಿಯೊಬ್ಬರೂ ಅಂದು ಹೊಸಬಟ್ಟೆ ಧರಿಸುವಂತೆ ನೋಡಿಕೊಳ್ಳುತ್ತಿದ್ದರು . ಹಬ್ಬ ಎಂದರೆ ಅಥಿತಿಗಳು ಇರಲೇಬೇಕು , ದಾವಣಗೆರೆಯ 'ಧವಳಗಿ ಸಿದ್ದಮ್ಮ ' ಪ್ರತಿಹಬ್ಬಕ್ಕೂ ನಮ್ಮ ಮನೆಯ ಅಥಿತಿ ಅವರ ಮನೆಯ ತೋಟದಲ್ಲಿ ಬೆಳೆದ ಕಡ್ಡಿ ದಾಸವಾಳ, ಅಗಲ  ದಾಸವಾಳ ,  ಮಲ್ಲಿಗೆ, ಚೆಂಡುಹೂವು, ಜರ್ಬೆರಾ , ಸೌಂಗಾಂಧಿಕಾ ಪುಷ್ಪ ,ಬಸವನಪಾದ , ತುಂಬೆಹೂವು ಇನ್ನೂ ಮತ್ತಿತರ ಹೂವುಗಳನ್ನು ಬೆಳಗ್ಗೆಯೇ ಕಿತ್ತುತಂದು ದೇವರ ಕೋಣೆಯನ್ನು ಅಣಿಮಾಡುವುದು ನನ್ನ ಕೆಲಸ . ಹಿತ್ತಾಳೆ ,ತಾಮ್ರದ (ಬೆಳ್ಳಿ ಇರಲಿಲ್ಲ) ಪೂಜಾ ಪಾತ್ರೆಗಳನ್ನು ಹುಣಿಸೇಹಣ್ಣು -ರಂಗೋಲಿಪುಡಿ ಹಾಕಿ ಥಳ -ಥಳ ಎನ್ನುವಂತೆ ಬೆಳಗಿ , ದೀಪಕ್ಕೆಎಣ್ಣೆ  ಬತ್ತಿ ಹಾಕಿ, ನೆಲಕ್ಕೆ ಕಂಬಳಿ ಹಾಸಿ , ಸ್ನಾನದ  ಮನೆಯಲ್ಲಿ ಕೆಂಪು ಮಡಿಯನ್ನಿಟ್ಟು ಅಪ್ಪಾಜಿಯವರನ್ನು ಸ್ನಾನಕ್ಕೆ ಕರೆಯುತ್ತಿದ್ದೆವು . ಸ್ನಾನ ಮಾಡಿ ಮಡಿಯುಟ್ಟು ಮೈತುಂಬಾ ವಿಭೂತಿ ಧರಿಸಿ ಮಂತ್ರ -ಗಾಯನ ಸಹಿತವಾಗಿ(ಕೊನೆಯಲ್ಲಿ ಜ್ಯೋತಿ ಬೆಳಗುತಿದೆ , ವಿಮಲಾ ಪರಂ ಜ್ಯೋತಿ ಬೆಳಗುತಿದೆ ಹಾಡು ಇರಲೇ ಬೇಕು https://www.youtube.com/watch?v=mHUeODjPA70 ಇನ್ನೂ ಉತ್ತಮವಾಗಿ ಹಾಡುತ್ತಿದ್ದರು) ಲಿಂಗ ಪೂಜೆ ಮಾಡುತ್ತಿದ್ದ ದೃಶ್ಯಗಳು ಇಂದು ನನ್ನ ನೆನಪಿನ ವೈಭವವಷ್ಟೇ . ಪೂಜೆಯಾಗುವ ಹೊತ್ತಿಗೆ ಎರಡು ತಟ್ಟೆಯಲ್ಲಿ ನೈವೆದ್ಯ (ಎಡೆ ) ದೇವರ ಕೊಣೆ  ತಲುಪುತ್ತಿತ್ತು . ಹೋಳಿಗೆ , ಕಾಯಿಹಾಲು , ಚಿತ್ರಾನ್ನ , ಪಲ್ಯ ,ಕೋಸಂಬರಿ ,ಅನ್ನ - ಸಾರು, ಸೊಂಡಿಗೆ ,ಹಪ್ಪಳ , ಬಳಕದ ಮೆಣಸಿನಕಾಯಿ ಇತ್ಯಾದಿ ಗಳು ಇರಲೇಬೇಕು . ಒಮ್ಮೊಮ್ಮೆ ಗೋಧಿ ಹುಗ್ಗಿ , ಮಾಲ್ದಿ -ರವೆ ಪಾಯಸ , ಗುಳಿಗೆ - ಗೌಲಿ ಪಾಯಸಗಳೂ ಆಗುತ್ತಿದ್ದವು . ಊಟವಾದ ನಂತರ ತಾಂಬೂಲ ಸೇವನೆ , ಅವರು ತಮ್ಮದೇ ಒಂದು ತಾಂಬೂಲ ಡಬ್ಬಿಯನ್ನಿಟ್ಟಿದ್ದರು , ಅದರಲ್ಲಿ ಇಂದು 'ಪಾನ್-ಬೀಡಾ ' ಮಾಡುವವನು ನಾಚಬೇಕು ಅಷ್ಟೊಂದು ವೈವಿಧ್ಯಮಯ ಪರಿಕರಗಳನ್ನು ಜೋಡಿಸಿಕೊಂಡಿದ್ದರು. 'ಜಫರಾನಿ ಜರ್ದಾ ' ಡಬ್ಬಿ ಅದರಲ್ಲಿ ಒಂದು.   ತಾಂಬೂಲ  ಸೇವನೆಯ  ಸಮಯದಲ್ಲಿ ಅಪ್ಪ ನಡುಮನೆಯಲ್ಲಿ ಕೂತು ಎಲ್ಲರೊಂದಿಗೂ ಹರಟುತ್ತಿದ್ದುದು ಇಂದು ನೆನಪಷ್ಟೇ . ತಮ್ಮ ನೆನಪಿನ ಬುತ್ತಿ ಬಿಚ್ಚಿಡುತ್ತಿದ್ದ ಅವರು ಬಾಲ್ಯದಲ್ಲಿ ಅನುಭವಿಸಿದ ಬಡತನ , ಒಮ್ಮೆ ಯುಗಾದಿಯಂದು ನವಣಕ್ಕಿ ಅನ್ನ ಸೇವನೆಮಾಡಿದ್ದನ್ನು ತಪ್ಪದೆ ನೆನಪಿಸುತ್ತಿದ್ದರು . ಆಹಾರವನ್ನು ಪ್ರಸಾದ ಎಂದು ಹೇಳುವುದಷ್ಟೇಅಲ್ಲದೆ , ಅದನ್ನು ತಮ್ಮ ಕೊರಳಿನಲ್ಲಿದ್ದ ಶಿವಲಿಂಗಕ್ಕೆ ಅರ್ಪಿಸಿ ಕಣ್ಣಿಗೊತ್ತಿಕೊಂಡು ಸೇವಿಸುತ್ತಿದ್ದರು. 
ಪೂಜೆ ಆದನಂತರ ಸರ್ವಾಲಂಕೃತ ಸುಗಂಧ ಭರಿತ  ದೇವರ ಕೋಣೆ ನೋಡುವುದೇ ಕಣ್ಣಿಗೆ ಹಬ್ಬ .  
ಸರ್ಪಭೂಷಣ ಮಠ -ಬಸವರಾಜ ರಾಜಗುರು 
***************************************
ಪ್ರತಿವರ್ಷ ಯುಗಾದಿ ಹಬ್ಬದದಿನ ಸಂಜೆ ಮನೆಮಂದಿಯನ್ನೆಲ್ಲಾ ನಮ್ಮ ತಂದೆಯವರು  ಸರ್ಪಭೂಷಣ ಮಠಕ್ಕೆ (ಮೆಜೆಸ್ಟಿಕ್ ನಲ್ಲಿದೆ) ಕರೆದುಕೊಂಡು ಹೋಗುತ್ತಿದ್ದರು. ಅಂದು ಅಲ್ಲಿ ಪ್ರವಚನದ ಜೊತೆಗೆ ಸಂಗೀತ ಕಾರ್ಯಕ್ರಮವಿರುತ್ತಿತ್ತು (ಈಗಲೂ ಸಹ ಮಲ್ಲಿಕಾರ್ಜುನ ಸ್ವಾಮಿಗಳು ನಡೆಸಿ ಕೊಂಡು ಹೋಗುತ್ತಿದ್ದಾರೆ) . ಬಸವರಾಜ ರಾಜಗುರು ಅವರ ಸಂಗೀತದ ಸವಿಯನ್ನು ಸವಿದದ್ದು ಅಲ್ಲಿಯೇ .
Photocredit:By Anupa4 - Sh. Nachiketa Sharma, CC BY-SA 3.0, https://commons.wikimedia.org/w/index.php?curid=6525022

 ಕರಿಕೋಟು , ಕೆಂಪು ರುಮಾಲು , ತುಟಿ ಕೆಂಪಗಾಗುವಂತೆ  ತಾಂಬೂಲ ಜಗಿದು . ವೇದಿಕೆ ಏರುತ್ತಿದ್ದ ಕಲಾವಿದ ರಸಸಾಗರದಲ್ಲಿ ನಮ್ಮನ್ನು ಮುಳುಗಿಸುತ್ತಿದ್ದರು . ರಾತ್ರಿಯ ಪ್ರಸಾದ ಅಲ್ಲಿಯೇ ಮುಗಿಸಿ ಮನೆಗೆ ಬರುವುದು ಸಂಪ್ರದಾಯ . ಆಗ ಇದ್ದ ಸದಾ ಮಂದಸ್ಮಿತರಾದ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳು ನನ್ನ ಸ್ಮೃತಿಪಟಲದ ಮೇಲೆ ಚಿರಸ್ಥಾಯಿಯಾಗಿ ಉಳಿದಿದ್ದಾರೆ(ಅನೇಕ ಬಾರಿ ನಮ್ಮ ಮನೆಗೆ ಅಪ್ಪನ ಆಹ್ವಾನದ ಮೇಲೆ ಶಿವಪೂಜೆಗೆ ಬರುತ್ತಿದ್ದರು ) . ಇಂದಿಗೂ ಒಮ್ಮೊಮ್ಮೆ ಸರ್ಪಭೂಷಣ ಮಠಕ್ಕೆ ಹೋಗಿಬರುತ್ತೇವೆ . ಈ ಬಾರಿ ಆಗಲಿಲ್ಲ . ಆದರೆ ಆ ನೆನಪುಗಳು ಜೀವಂತವಾಗಿವೆ. 

ಬದುಕಿನಲ್ಲಿ ಭೌತಿಕ ಶ್ರೀಮಂತಿಕೆ ಇರದಿದ್ದರೂ(ಆಗ), ನಮ್ಮ ಜೀವನ ಅತ್ಯಂತ ಶ್ರೀಮಂತ ಭಾವನೆಗಳಿಂದ ತುಂಬುವಂತೆ ಬಾಳಿ ಬದುಕಿದ ಅವರಿಂದು ನಿಜಕ್ಕೂ ಆದರ್ಶ ದಂಪತಿಗಳು . ಅಪ್ಪಾಜಿ ಪಂಡಿತನಾಗಿದ್ದರೂ ಕೇವಲ ಎರಡನೇ ತರಗತಿ ಓದಿದ್ದ ನನ್ನ ತಾಯಿಯವರನ್ನು ಪತ್ನಿಯಾಗಿ ಗೌರವದಿಂದ ಬಾಳಿಸಿದ್ದೇ ಅಲ್ಲದೇ , ಆಕೆ ಸತ್ತಾಗ  ಮದುವೆಯಾಗದ ನಾಲ್ವರು ಮಕ್ಕಳಿದ್ದ  ಸಂಸಾರದ ರಥವನ್ನು ಒಬ್ಬನೇ ಎಳೆದರು , ಬದುಕನ್ನು ಎದುರಿಸುವ  ಆದರ್ಶಕ್ಕೆ ಒಂದು ನಿದರ್ಶನವಾಗಿ ನಿಲ್ಲುತ್ತಾರೆ .  
ಅತ್ಯಂತ ಸಂಕ್ಷಿಪವಾಗಿ ಬರೆದ ನೆನಪುಗಳಿವು . ವಿಸ್ತರಿಸಿದರೆ ಹಲವು ಪುಟಗಳೇ ಆದೀತು.  

Wednesday 22 March 2017

Bangalore Science Forum Golden Jubilee Summer School

Golden jubilee summer School in Science 24th April to 6th May, only 60 seats available on first come first serve basis -
confirmed programs:
Visit to JNCASR, IIIT-B, Maiyas, NIMHANS.
Activities: Nature inspired technology, Physics, Chemistry, Mathematics
Lectures: How to make a satellite? Nature Inspired technologies, Brain and its function etc.

Contact : Sri A H Mohan at National College Office, Ph :9900320532